ಅಂದು ಮೋದಿ, ಇಂದು ತಲೈವಾ, ಏನದು ಗೊತ್ತಾ!?

Soma shekhar
ಬೆಂಗಳೂರು: ಅಂದು ಮೋದಿ, ಇಂದು ತಲೈವಾ ರಜಿನಿಕಾಂತ್, ಹೌದು, ನಟ ರಜನಿಕಾಂತ್‌ಗೂ ಬಂಡೀಪುರ ಕಾಡಿಗೂ ಎಲ್ಲಿಯ ಸಂಬಂಧ? ಸದಾ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅವರು ಈಗ ಕರುನಾಡಿನ ದಟ್ಟ ಕಾನನದಲ್ಲಿ ಅಲೆಯುತ್ತಿದ್ದಾರೆ. ಹಾಗಂತ ಈ ಸುತ್ತಾಟ ಯಾವುದೇ ಸಿನಿಮಾ ಸಲುವಾಗಿ ಅಲ್ಲ. ಕಳೆದ ಎರಡು ದಿನಗಳಿಂದ ತಲೈವಾ ಕಾಡಿನ ಸಹವಾಸ ಮಾಡಿರುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಮುಂದೆ ಓದಿ... 
 
ಇದ್ದಕ್ಕಿದ್ದಂತೆ ಸೂಪರ್ ಸ್ಟಾರ್ ರಜನಿಕಾಂತ್ ಕಾಡಿನತ್ತ ಹೆಜ್ಜೆ ಹಾಕುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ 'ಮ್ಯಾನ್‌ ವರ್ಸಸ್‌ ವೈಲ್ಡ್‌' ಕಾರ್ಯಕ್ರಮದ ಸಲುವಾಗಿ ಅವರು ಬಂಡೀಪುರ ಅರಣ್ಯ ಪ್ರದೇಶಕ್ಕೆ ಬಂದಿದ್ದಾರೆ. ಅವರ ಜೊತೆಗೆ ಕಾರ್ಯಕ್ರಮದ ಸ್ಟಾರ್‌ ನಿರೂಪಕ ಬೇರ್‌ ಗ್ರಿಲ್ಸ್‌ ಇದ್ದಾರೆ. ರಜನಿಕಾಂತ್‌ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆಯಾದರೂ, ವಿವಾದವನ್ನೂ ಹುಟ್ಟು  ಹಾಕಿದೆ.
 
ಚೆನ್ನೈನಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಬಂದಿಳಿದಿರುವ ರಜನಿಕಾಂತ್‌, ಪ್ರತಿ ದಿನ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಅಲ್ಲಿಂದ ಬಂಡೀಪುರ ಕಾಡಿಗೆ ತೆರಳಲು ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿಯೇ ತಾತ್ಕಾಲಿಕ ಹೆಲಿಪ್ಯಾಡ್‌ ಕೂಡ ನಿರ್ಮಾಣ ಆಗಿದೆ. ಬಂಡೀಪುರ ಅರಣ್ಯ ಪ್ರದೇಶದ ಸಮೀಪ ಇರುವ ರೆಸಾರ್ಟ್‌ನಲ್ಲೂ ರಜನಿ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆಯಂತೆ. ಒಟ್ಟು ಮೂರು ದಿನಗಳು ಅವರು ಕಾಡಿನಲ್ಲಿ ಸುತ್ತಾಟ ನಡೆಸಲಿದ್ದಾರೆ. ಕಾರ್ಯಕ್ರಮದ ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಕೂಡ ದೊರೆತಿದೆ.
 
ಈ ಹಿಂದೆ ಇದೇ 'ಮ್ಯಾನ್‌ ವರ್ಸಸ್‌ ವೈಲ್ಡ್‌' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಬೇರ್‌ ಗ್ರಿಲ್ಸ್‌ ಜೊತೆಗೆ ಅವರು ಕಾಡಿನ ಹಲವು ವಿಚಾರಗಳನ್ನು ಚರ್ಚಿಸಿದ್ದರು. ಕಾರ್ಯಕ್ರಮದ ಸಾಧಕ ಬಾಧಕಗಳ ಬಗ್ಗೆ ಪರ-ವಿರೋಧ ವ್ಯಕ್ತವಾಗಿತ್ತು.ಇಂಥ ಟೆಲಿವಿಷನ್‌ ಕಾರ್ಯಕ್ರಮದ ಅನಿವಾರ್ಯತೆ ಏನಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಕೆಲವೇ ಜಾಗಗಳಲ್ಲಿ ಮಾತ್ರ ಚಿತ್ರೀಕರಣ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡಿದೆಯಂತೆ. ​ಪರಿಸರವಾದಿಗಳಿಂದ ಭಾರಿ ವಿರೋಧ ಕೇಳಿ ಬರುತ್ತಿದೆ. ಅರಣ್ಯ ಇಲಾಖೆಯು ಸಹ ಷರತ್ತುಗಳನ್ನು ವಿಧಿಸಿ ಕಳುಹಿಸಿದೆ. ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬುದು ಕಾದು ನೋಡಬೇಕಾಗಿದೆ.
 

Find Out More:

Related Articles: