ಚಳಿಗಾಲದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತದಂತೆ..!! ಇದಕ್ಕೆ ಕಾರಣ ಏನು ಗೊತ್ತಾ..?

Soma shekhar

ಕೊರೋನ ವೈರಸ್ ಪ್ರತಿನಿತ್ಯಕೂಡ ತನ್ನ ಅಬ್ಬರವನ್ನು ಹೆಚ್ಚಿಸುತ್ತಿದ್ದು ಪ್ರತಿನಿತ್ಯವುಕೂಡ ಸಾವಿರಾರು ಮಂದಿ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾ ಸೋಂಕು ಕಾಲದಿಂದ ಕಾಲಕ್ಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಬೇಸಿಗೆಕಾಲದಲ್ಲಿದ್ದ ಕೊರೋನಾ ಸೋಂಕು ಮಳೆಗಾಲದಲ್ಲಿ ಮತ್ತಷ್ಟು ಹೆಚ್ಚಾಗಿದೆ, ಅದೇ ರೀತಿ ಚಳಿಗಾಲದಲ್ಲೂ ಕೂಡ ಈ ಪ್ರಮಾಣ ಹೆಚ್ಚಾಗುತ್ತದೆ ಎಂಬ ವರದಿ ಬಹಿರಂಗವಾಗಿದೆ.

 

ಹೌದು ಐಐಟಿ ಭುವನೇಶ್ವರ (IIT Bhubaneswar) ಮತ್ತು ಏಮ್ಸ್ (AIIMS) ವಿಜ್ಞಾನಿಗಳು ನಡೆಸಿದ ಅಧ್ಯಯನವು ಮಾನ್ಸೂನ್ ಮತ್ತು ಚಳಿಗಾಲದಲ್ಲಿ ಕೊರೋನಾವೈರಸ್ (Coronavirus) ಕೋವಿಡ್ -19 ಸೋಂಕಿನ ಪ್ರಕರಣಗಳು ಹೆಚ್ಚಾಗಬಹುದು ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿವೆ.

 

ಐಐಟಿ-ಭುವನೇಶ್ವರದಲ್ಲಿ ಸ್ಕೂಲ್ ಆಫ್ ಅರ್ಥ್, ಸಾಗರ ಮತ್ತು ಹವಾಮಾನ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ವಿ.ವಿನೋಜ್ ನಡೆಸಿದ ಈ ಅಧ್ಯಯನದ ಪ್ರಕಾರ ಮಳೆ, ತಾಪಮಾನ ಕುಸಿತ ಮತ್ತು ಶೀತ ವಾತಾವರಣದಲ್ಲಿ ಕೋವಿಡ್ -19 ಸೋಂಕಿನ ಹರಡುವಿಕೆ ಹೆಚ್ಚಾಗಲಿದೆ.

 

ಭಾರತದಲ್ಲಿ ಕೋವಿಡ್ -19 ಹರಡುವಿಕೆಯ ತಾಪಮಾನ ಮತ್ತು ಸಾಪೇಕ್ಷ ಆರ್ದ್ರತೆಯ ಶೀರ್ಷಿಕೆಯ ವರದಿಯು ಏಪ್ರಿಲ್ ಮತ್ತು ಜೂನ್ ನಡುವೆ 28 ರಾಜ್ಯಗಳಲ್ಲಿ ಕರೋನಾವೈರಸ್ ಕೋವಿಡ್ -19 (Covid-19) ಪ್ರಕರಣಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿದೆ ಎಂದು ತಿಳಿಸಿದೆ.

 

ತಾಪಮಾನ ಹೆಚ್ಚಳವು ವೈರಸ್ ಹರಡುವಿಕೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ ಎಂದು ಅಧ್ಯಯನವು ತೋರಿಸಿದೆ ಎಂದು ವಿನೋಜ್ ಹೇಳಿದ್ದಾರೆ. ಅಧ್ಯಯನದ ಪ್ರಕಾರ ತಾಪಮಾನದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಳದಿಂದಾಗಿ, ಪ್ರಕರಣಗಳಲ್ಲಿ ಶೇಕಡಾ 0.99 ರಷ್ಟು ಇಳಿಕೆ ಕಂಡುಬರುತ್ತದೆ ಮತ್ತು ಪ್ರಕರಣಗಳು ದ್ವಿಗುಣಗೊಳ್ಳುವ ಸಮಯವು 1.13 ದಿನಗಳಿಗೆ ಹೆಚ್ಚಾಗುತ್ತದೆ.

 

ತಾಪಮಾನದ ಕುಸಿತವು ಸಾಂಕ್ರಾಮಿಕ ಹರಡುವಿಕೆಗೆ ಕಾರಣವಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ ಎಂದು ಸಂಶೋಧನಾ ತಂಡದ ಭಾಗವಾಗಿದ್ದ ಏಮ್ಸ್ ಭುವನೇಶ್ವರ ಮೈಕ್ರೋಬಯಾಲಜಿ ವಿಭಾಗದ ಡಾ.ಬಿಜಯಿನಿ ಬೆಹೆರಾ ಹೇಳಿದ್ದಾರೆ. ಆದಾಗ್ಯೂ ನಿಖರ ಫಲಿತಾಂಶಗಳಿಗಾಗಿ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

 

ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಿದೆ. ಭಾನುವಾರ ದೇಶಾದ್ಯಂತ 38,902 ಕರೋನಾ ಪ್ರಕರಣಗಳು ವರದಿಯಾಗಿವೆ. ಇದೇ ಸಂದರ್ಭದಲ್ಲಿ 543 ಮಂದಿ ಸೋಂಕಿಗೆ ಬಲಿಯಾಗಿದ್ದು ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮೃತಪಟ್ಟವರ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ. ಆದಾಗ್ಯೂ ದೇಶದಲ್ಲಿ ಕರೋನಾದಿಂದ ಚೇತರಿಸಿಕೊಳ್ಳುವ ಜನರ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಈವರೆಗೆ 6,77,423 ಜನರನ್ನು ಈ ಕಾಯಿಲೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂಬುದು ಸಮಾಧಾನಕರ ಸಂಗತಿಯಾಗಿದೆ.

 

Find Out More:

Related Articles: