ಕೃಷಿ ಮಸೂದೆಯನ್ನು ತನ್ನ ರಾಜ್ಯಗಳಲ್ಲಿ ತಡೆಯಲು ಕಾಂಗ್ರೆಸ್ ರೂಪಿಸಿರುವ ತಂತ್ರ ಏನು..?

Soma shekhar
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ದೇಶದಾಧ್ಯಂತ  ಅನೇಕ ವಿರೋಧ ಪಕ್ಷಗಳು ಸಾಕಷ್ಟು ಹೋರಾಟಗಳನ್ನು ಮಾಡಲಾಗುತ್ತಿದೆ. ಆದರ ಜೊತೆಗೆ ಕೇಂದ್ರ ಸರ್ಕಾರದ ಕೃಷಿ ಮಸೂದೆ ರೈತರ ವಿರೋಧಿ ಮಸೂದೆ ಎಂದು ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಈ ಮಸೂದೆಯು ಜಾರಿಗೆ ಬರದಂತೆ ತಡೆಯಲು ಕೆಲವು  ಮಾದರಿ ಕಾನೂನುಗಳನ್ನು ಜಾರಿಗೊಳಿಸಲಾಗಿದೆ



ಹೌದು ಕೇಂದ್ರ ಸರ್ಕಾರ ನೂತನವಾಗಿ ತಂದಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನುಗಳನ್ನು ನಿರರ್ಥಕಗೊಳಿಸುವ ಉದ್ದೇಶದಿಂದ, ಮಾದರಿ ಕಾನೂನುಗಳ ಕರಡನ್ನು ಕಾಂಗ್ರೆಸ್‌ ಸಿದ್ಧಪಡಿಸಿದೆ. ಜೊತೆಗೆ ಇವುಗಳನ್ನು ಕಾಂಗ್ರೆಸ್‌ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಜಾರಿಗೊಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ.




'ಮಾದರಿ ಕಾನೂನಿನ ಕರಡು ಸಿದ್ಧವಾಗಿದ್ದು, ಇವುಗಳನ್ನು ವಿಧಾನಸಭೆಯಲ್ಲಿ ಮಂಡಿಸಿ ಶಾಸನ ರಚಿಸಲು ಶೀಘ್ರವೇ ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಿಗೆ ಕಳುಹಿಸಿಕೊಡಲಾಗುವುದು' ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಈ ಮಾದರಿ ಕಾನೂನನ್ನು 'ರೈತರ ಹಿತಾಸಕ್ತಿ ಹಾಗೂ ರೈತರ ಉತ್ಪನ್ನಗಳ ರಕ್ಷಣೆ ಮಸೂದೆ' ಎಂದು ಕರೆಯಲಾಗಿದ್ದು, ಪಕ್ಷದ ಕಾನೂನು ತಜ್ಞ ಅಭಿಷೇಕ್‌ ಸಿಂಘ್ವಿ ಅವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ.





ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಮೂರು ಕೃಷಿ ಕಾನೂನುಗಳ ವ್ಯಾಪ್ತಿಯಿಂದ ರಾಜ್ಯಗಳನ್ನು ಹೊರಗಿಡಲು ಸಾಧ್ಯವಾಗುವಂತೆ ರಾಜ್ಯಮಟ್ಟದಲ್ಲಿ ಕಾನೂನು ರಚಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳೆದ ಸೋಮವಾರ ಸಲಹೆ ನೀಡಿದ್ದರು.





'ಕೇಂದ್ರ ಸರ್ಕಾರವು ಜಾರಿ ಮಾಡಿರುವ ಕೃಷಿ ಕಾನೂನುಗಳು ರೈತವಿರೋಧಿಯಾಗಿದ್ದು, ಅವು ಜಾರಿಯಾಗದಂತೆ ಸಂವಿಧಾನದ 254(2)ನೇ ವಿಧಿಯಡಿ ಕಾನೂನುಗಳನ್ನು ರಚಿಸಬೇಕು. ಹೀಗೆ ಮಾಡಿದರೆ, ಮೂರು ಕೃಷಿ ಕಾನೂನುಗಳ ರೈತವಿರೋಧಿ ನೀತಿಗಳಿಂದ ರೈತರನ್ನು ರಕ್ಷಿಸಲು ಸಾಧ್ಯವಾಗಲಿದೆ' ಎಂದು ಸೋನಿಯಾ ತಿಳಿಸಿದ್ದರು. ಇದಾದ ಬೆನ್ನಲ್ಲೇ ಮಾದರಿ ಕಾನೂನುಗಳ ಕರಡು ರಚಿಸಲಾಗಿದೆ.





ಎನ್‌ಡಿಎಯೇತರ ಕೆಲ ರಾಜ್ಯಗಳೂ ಈ ಕಾನೂನುಗಳನ್ನು ವಿರೋಧಿಸಿದ್ದು, ಇವುಗಳೂ ಹೊಸ ಕಾನೂನುಗಳನ್ನು ರಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ, ಅ.4ರಂದು ಪಂಜಾಬ್‌ ಮತ್ತು ಹರಿಯಾಣದಲ್ಲಿ ಟ್ರ್ಯಾಕ್ಟರ್‌ ರ್‍ಯಾಲಿಯನ್ನು ಕಾಂಗ್ರೆಸ್‌ ಆಯೋಜಿಸಲಿದ್ದು, ಇದರಲ್ಲಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಭಾಗವಹಿಸಲಿದ್ದಾರೆ.

Find Out More:

Related Articles: