ರಾಹುಲ್ ಗಾಂಧಿ ಪ್ರಕಾರ ಪ್ರಧಾನಿ ಮೋದಿ ಯಾರ ಕೈಗೊಂಬೆ..?

Soma shekhar

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಸಾಕಷ್ಟು ಹೋರಾಟಗಳೂ ನಡೆಯುತ್ತಿದೆ ಇದಕ್ಕೆ ವಿರೋಧ ಪಕ್ಷಗಳು ಈ ಹೋರಾಟಕ್ಕೆ ಸಾಥ್ ನೀಡುತ್ತಿವೆ. ಈ ಕುರಿತಾಗಿ ವಿರೋಧ ಪಕ್ಷಗಳು ಆಡಳಿತ ಪಕ್ಷಗಳ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಾ ತಮ್ಮ ಅಸಮದಾನವನ್ನು ಹೊರಹಾಕಿದೆ. ಅದೇ ರೀತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ.





ಹೌದು ಕೇಂದ್ರದಲ್ಲಿ ತನ್ನ ಪಕ್ಷವು ಅಧಿಕಾರಕ್ಕೆ ಬಂದರೆ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ರವಿವಾರ ಭರವಸೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,ಬಿಜೆಪಿ ನೇತೃತ್ವದ ಸರಕಾರವು ಆಯ್ದ ಕಾರ್ಪೊರೇಟ್ ಸಂಸ್ಥೆಗಳ ಒತ್ತಾಸೆಯಂತೆ ರೈತರನ್ನು ನಾಶಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಂಬಾನಿ ಮತ್ತು ಅದಾನಿಗಳ ಕೈಗೊಂಬೆಯಾಗಿದ್ದಾರೆ ಎಂದು ಟೀಕಿಸಿದರು.





ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಅ.4ರಿಂದ ಅ.6ರವರೆಗೆ ರಾಜ್ಯದಲ್ಲಿ ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಂಡು ಬಡ್ನಿ ಕಲಾನ್‌ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಮೋದಿ ವಿರುದ್ಧ ತೀವ್ರ ದಾಳಿ ನಡೆಸಿದರಲ್ಲದೆ,ಕೊರೋನ ವೈರಸ್ ಬಿಕ್ಕಟ್ಟಿನ ಮಧ್ಯೆ ನೂತನ ಕೃಷಿ ಕಾನೂನುಗಳನ್ನು ತರುತ್ತಿರುವ ಅಗತ್ಯವನ್ನು ಪ್ರಶ್ನಿಸಿದರು.





ಕನಿಷ್ಠ ಬೆಂಬಲ ಬೆಲೆ ಮತ್ತು ಆಹಾರ ಖರೀದಿ ವ್ಯವಸ್ಥೆಯನ್ನು ಅಂತ್ಯಗೊಳಿಸುವುದು ಅವರ (ಸರಕಾರ) ಗುರಿಯಾಗಿದೆ. ಈ ಗುರಿಯನ್ನು ತಲುಪಿದ ದಿನ ಪಂಜಾಬ್ ಮತ್ತು ಹರ್ಯಾಣದ ರೈತರ ಕಥೆ ಮುಗಿಯುತ್ತದೆ ಎನ್ನುವುದು ಅವರಿಗೆ ಗೊತ್ತಿದೆ ಎಂದ ರಾಹುಲ್,'ಆದರೆ ಕಾಂಗ್ರೆಸ್ ಇದಕ್ಕೆ ಅವಕಾಶ ನೀಡುವುದಿಲ್ಲ. ನಿಮ್ಮ ಬೆಂಬಲಕ್ಕೆ ನಾವು ಬಲವಾಗಿ ನಿಂತಿದ್ದೇವೆ. ನಾವು ಒಂದು ಇಂಚಿನಷ್ಟೂ ಹಿಂದೆ ಸರಿಯುವುದಿಲ್ಲ 'ಎಂದು ಹೇಳಿದರು.





ನೂತನ ಕಾನೂನುಗಳು ರೈತರಿಗಾಗಿಯೇ ರೂಪಿಸಲ್ಪಟ್ಟಿದ್ದರೆ ಅವರೇಕೆ ಈ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ರಾಹುಲ್,ಭೂ ಸ್ವಾಧೀನ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸಿದ್ದನ್ನು ಪ್ರಸ್ತಾಪಿಸಿದರು.ವ್ಯವಸ್ಥೆಯಲ್ಲಿ ಸುಧಾರಣೆಗಳು ಮತ್ತು ಬದಲಾವಣೆಗಳು ಅಗತ್ಯವಾಗಿದ್ದರೂ,ವ್ಯವಸ್ಥೆಯನ್ನೇ ನಾಶಗೊಳಿಸಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ವ್ಯವಸ್ಥೆಯೇ ನಾಶವಾದರೆ ರೈತರ ಸುರಕ್ಷತೆಗೆ ಯಾವುದೇ ಮಾರ್ಗವಿರುವುದಿಲ್ಲ ಎಂದರು.




2-3 ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳನ್ನು ಈಡೇರಿಸಲು ಮೋದಿ ಕಳೆದ ಆರು ವರ್ಷಗಳಿಂದ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ ಮತ್ತು ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Find Out More:

Related Articles: